Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ತುಳುನಾಡ ಪತನಕ್ಕೆ ಬೀಳುವ ಮೊದಲ ಕೊಡಲಿಯೇಟು

ಶೈಲು ಬಿರ್ವ ಅಗತ್ತಾಡಿ
ದೋಲ ಬಾರಿಕೆ

ತುಳುನಾಡು ತುಳಿದಷ್ಟು ಹದಕ್ಕೆ ಬರುವ ಬದುಕು. ಇಲ್ಲಿ ತನ್ನವರಲ್ಲದವರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಕಾವು ಕೊಟ್ಟ ನಾಡು. ಯಾರೇ ಆಕ್ರಮಣ ಮಾಡಿದರು ಪ್ರತಿರೋಧ ಒಡ್ಡದೆ ತಾಯಿಯಷ್ಟು ಸಹನೆಯುಳ್ಳ ಮಣ್ಣು. ಆದರೆ ಇಂದು ತುಳುನಾಡ ಒಂದು  ಮೂಲಿಗರು ಕಳಚಿ ಬೀಳುವಷ್ಟು ಸ್ಥಿತಿಗೆ ಬಂದು ನಿಂತಿದೆ ಎನ್ನುವುದಾದರೆ ಅದು ತುಳುನಾಡ ಪತನಕ್ಕೆ ಬೀಳುವ ಮೊದಲ ಕೊಡಲಿಯೇಟು
ಎಂದರೆ ತಪ್ಪಾಗಲಾರದು. ಹೌದು ನಾನು ಹೇಳ ಹೊರಡಿರುವುದು ತುಳುನಾಡ ಮೂಲಿಗರು ಮತ್ತು ಮುಗ್ದ ಜನಾಂಗವಾದ ಕೊರಗ ಸಮುದಾಯದವರ ಬಗ್ಗೆ. ನಾಗರೀಕತೆಯ ನೆರಳು ಸೋಂಕದೆ ಬದುಕಿದವರು ಯಾರ ಜಂಜಾಟವು ಬೇಡವೆಂದು ಊರಿಗೆ ಬರದೆ ಪ್ರಕೃತಿಯೊಂದಿಗೆ ಸಮ್ಮಿಲಿತವಾದವರು. ಆಹಾರ ಸಂಪಾದಿಸು ನೆಮ್ಮದಿಯಿಂದ ಬದುಕು ಎನ್ನುವುದಷ್ಟೆ ಅವರ ಬದುಕಿನ ಗುರಿಯಾಗಿತ್ತು. ಕ್ರಮೇಣ ನಾಗರೀಕತೆಯ ಸೋಂಕು ಅವರನ್ನು ತಗುಲಿತು, ಅವರ ಅಡಿಪಾಯ ಅಲುಗಾಡಲಾರಂಭಿಸಿತು. ಸಮಾಜ ಯಾವತ್ತು ಅವರನ್ನು ನಮ್ಮವರೆಂದು ಕಂಡಿದ್ದು ಅಷ್ಟಕಷ್ಟೆ ಇದೆ. ಇಂದು ಅವರ ಜೀವಿತಾವಧಿ 50ಕ್ಕೆ ಬಂದು ನಿಂತಿದೆ ಎಂದಾದರೆ ಅದಕ್ಕೆ ಇಡೀ ಸಮಾಜವೆ ಹೊಣೆ. ತುಳುನಾಡು ಬದುಕು ಮತ್ತು ಬದುಕಲು ಬಿಡು ಎನ್ನುವ ಸಾರ್ವಕಾಲಿಕ ಸತ್ಯದೊಂದಿಗೆ ಬದುಕುತ್ತಿದೆ ಆದರೆ ಅದಕ್ಕೆ ವ್ಯತ್ತಿರಿಕ್ತವಾಗಿ ನಾವು ತೋರಿಸಿ ಆಗಿದೆ. ಆದರೆ ಅದಕ್ಕು ಮಿಕ್ಕಿ ನಾವು ಆ ಮುಗ್ದ ಜನಾಂಗವನ್ನು ಉಪಯೋಗಿಸಿ ಉಪಯೋಗ ಪಡೆದಿದ್ದೆ ಹೆಚ್ಚು. ಹಿಂದೆ ಯಾರದೇ ಮನೆಯಲ್ಲಿ ಮಗುವಿಗೆ ಬಾಲಗ್ರಹ ದೋಷಾದಿಗಳು ಕಂಡು ಬಂದಲ್ಲಿ ಕೊರಗ ಸಮುದಾಯದ ತಾಯಿಯ ಎದೆಗೆ ಹಾಕುವ ಸಂಪ್ರದಾಯವಿತ್ತು, ಅಂದರೆ ಆ ತಾಯಿ ಮಗುವಿಗೆ ತನ್ನ ಎದೆ ಹಾಲು ಉಣಿಸಿ ಕಡೆಗೆ ಆ ಮಗುವಿಗೆ ತನ್ನದೇ ಆದ ಒಂದು ಹೆಸರನ್ನು ಇಟ್ಟು ಮಗು ಹಿಂತಿರುಗಿಸಲು ಆಕೆ ಕೇಳಿದನ್ನು ಕೊಟ್ಟು ಪಡೆಯಬೇಕಿತ್ತು. ಆಕೆ ಕೇಳಿದನ್ನು ಎಂದ ತಕ್ಷಣ ಆಕೆ ದೊಡ್ಡದ್ದು ಏನು ಕೇಳುತ್ತಿರಲಿಲ್ಲ ಆಹಾರ, ಸ್ವಲ್ಪ ಹಣ, ಹಳೆ ಬಟ್ಟೆ ಇಷ್ಟೆ ಆಕೆ ಕೇಳುತ್ತಿದ್ದದ್ದು. ಇಲ್ಲಿ ಆಕೆಯ ಅತೀ ಆಸೆ ಇರಲಿಲ್ಲ ಕೇವಲ ಜೀವನೋಪಾಯ ವಸ್ತುಗಳಷ್ಟೆ ಆಕೆಯ ಬೇಡಿಕೆಯಾಗಿತ್ತು. ಇಲ್ಲಿ ಯಾಕೆ ಅದೇ ಸಮುದಾಯದ ತಾಯಿಯ ಎದೆ ಹಾಲೇ ಬೇಕು ಎಂದು ನೋಡುವಾಗ ವೈಜ್ಞಾನಿಕ ಸತ್ಯ ರೋಗ ನಿರೋಧಕ ಶಕ್ತಿಯ ಆಗರ ಆಕೆಯ ಎದೆ ಹಾಲು ಎನ್ನುವ ನಂಬಿಕೆ. ಕಾಡಲ್ಲೇ ಇರುವ ಅವರು ಕಾಡಿನಲ್ಲಿ ಸಿಗುವ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನ್ನು ತಿಂದು ಆರೋಗ್ಯವಂತರಾಗಿರುತ್ತಾರೆ ಎನ್ನುವ ನಂಬಿಕೆ. ಹಾಗಾದರೆ ಇಲ್ಲಿ ಮಕ್ಕಳನ್ನು ರಕ್ಷಿಸುವ ಮಹಾಮಾತೆಯರಾಗಿ ಯಾಕೆ ನಮಗೆ ಗೋಚರವಾಗಲಿಲ್ಲ? ನಾಡಿನ ವಿಷ ಮಿಶ್ರಿತ ಆಹಾರಗಳಿಗಿಂತ ಕಾಡಿನ ಜೈವಿಕ ಆಹಾರಗಳೆ ಅವರ ಜೀವನಾಡಿಯಾಗಿರುವುದರಿಂದ ಅವರಲ್ಲಿ ನಾಡಿನವರಿಗಿಂತ ಹೆಚ್ಚು ರೋಗ ನಿರೋಧಕ ಶಕ್ತಿಗಳು ಇದ್ದಿರಬೇಕು. ಇನ್ನು ಕೆಲವೊಂದು ಆಚರಣೆಗಳು ಅವರನ್ನು ಇನ್ನಷ್ಟು ಹೈರಾಣಾಗಿಸಿದೆ.  ಮೇಲ್ವರ್ಗ  ಎನಿಸಿಕೊಂಡವರ ಸೀಮಂತಗಳಲ್ಲಿ  ಅವರನ್ನು ಬಳಸಿಕೊಳ್ಳುವ ರೀತಿ ಇಂದಿನ ಯುಗ ಒಪ್ಪಿಕೊಳ್ಳುವಂತದಲ್ಲ. ನಮ್ಮ ಮನೆಯವರ ಎಂಜಲನ್ನೆ ತಿನ್ನದ ನಾವು ಸೀಮಂತಿನಿ ತಿಂದ ಎಲೆಗೆ ಇನ್ನಷ್ಟು ಆಹಾರವನ್ನು ಹಾಕಿ ಕೊರಗ ಸಮುದಾಯದ ಮಹಿಳೆಗೆ ನೀಡುವುದು ನವ ನಾಗರೀಕತೆ ಒಪ್ಪಿಕೊಳ್ಳುವಂತದಲ್ಲ. ಆದರೆ ಇಂದು ಇಂತಹ ಆಚರಣೆಗಳು ತೆರೆ ಮರೆಯಲ್ಲಿ ನಡೆಯುತ್ತಿದೆ ಆದರೆ ಕಾನೂನಿನ ಭಯದಿಂದ ಮುಕ್ತವಾಗಿ ಇದು ನಡೆಯುತ್ತಿಲ್ಲ, ಅಷ್ಟಕ್ಕೆ ಸ್ವಲ್ಪ ಸಂತೋಷ ಪಡಬೇಕು. ಇನ್ನು ದೈವಾರಾಧನೆಯಲ್ಲಿ ಕೊರಗ ಸಮುದಾಯದ ಡೋಲು ಅತೀ ಪ್ರಾಮುಖ್ಯತೆಯನ್ನು ಪಡೆದಂತಹ ಸಾಧನ. ಆದರೆ ಇಂದು ಅದೇ ಕೊರಗ ಸಮುದಾಯ ಅದೆಷ್ಟೋ ದೂರದಲ್ಲಿ ನಿಂತುಕೊಂಡು ಕೋಲ/ ನೇಮದಲ್ಲಿ ಡೋಲು ಬಾರಿಸಬೇಕು, ಆದರೆ ಯಾವ ಪುರುಷಾರ್ಥಕ್ಕೆ ಅವರು ಬಾರಿಸುತ್ತಿರುವುದು. ಕೇವಲ ಸಂಪ್ರದಾಯದ ಹಿನ್ನೆಲೆಯಲ್ಲಿ ಡೋಲು ಬಾರಿಸುತ್ತಿದ್ದಾರೆ ಯಾರು ಕೇಳಲು. ಅವರನ್ನು ಇವತ್ತಿಗೂ ನಾವು ಹತ್ತಿರ ಬಿಟ್ಟುಕೊಂಡಿಲ್ಲ ಯಾಕೆ. ಒಂದು ಕಾಲದಲ್ಲಿ ದೈವಾರಾಧನೆ, ಹುಟ್ಟು ಮತ್ತು ಸಾವಿಗೆ ಇದೇ ಕೊರಗ ಸಮುದಾಯದ ಡೋಲು ಪ್ರಾಮುಖ್ಯತೆ ಪಡೆದುಕೊಂಡಿತು ಆದರೆ ಇಂದು ಸ್ಯಾಕ್ಸೋಫೋನ್, ಚೆಂಡೆಗಳ ಅಬ್ಬರದಲ್ಲಿ ಡೋಲು ಹೊಳಪು ಕಳೆದುಕೊಂಡು ಮಂಕಾಗಿದೆ. ಆದರೆ ಇವತ್ತಿಗೂ ತುಳುನಾಡಲ್ಲಿ ಒಂದು ನಂಬಿಕೆಯಿದೆ, ಇವರ ಮುಖ ದರ್ಶನ ಬೆಳಿಗ್ಗೆ ಆದರೆ ಅದೃಷ್ಟ ಎನ್ನುವ ನಂಬಿಕೆ. ಇವತ್ತಿಗೂ ಇದು ನಂಬಿಕೆ ಆಧಾರದಲ್ಲಿ ಪ್ರಚಲಿತದಲ್ಲಿದೆ. ನನ್ನ ಚಿಕ್ಕಪ್ಪನವರ ದಿನಚರಿ ಪ್ರಾರಂಭವಾಗುತ್ತಿದ್ದದ್ದೆ ಕೊರಗರೊಬ್ಬರ ಮುಖ ನೋಡಿ. ನಮ್ಮಲ್ಲಿ ಒಬ್ಬ ಬಾಬು ಕೊರಗರೆಂಬವರಿದ್ದರು ಅವರು ನನ್ನ ಚಿಕ್ಕಪ್ಪ ಎದ್ದೇಳುವ ಮುಂಚೆ ಬಂದು ಕಿಟಕಿಯ ಹತ್ತಿರ  ನಿಂತು ಬೈದೆರೆ ಅಂತ ಕರೆದು ಬೀಡಿ ಕೇಳುವುದು, ಅಲ್ಲೇ ಕಿಟಕಿ ಪಕ್ಕ ಮಂಚದಲ್ಲಿ ಮಲಗಿದ್ದ ಅವರು ಬಂದಿದ್ದೀಯ ಅಂತ ಕೇಳುತ್ತ ಆತನ ಮುಖ ನೋಡಿ ಅವರ ದಿನಚರಿ. ಅವರೇ ಹೇಳುತ್ತಿದ್ದರು ಈತನ ಮುಖ ನೋಡಿದ ದಿನ ನನ್ನ ವ್ಯಾಪಾರದಲ್ಲಿ ಯಾವತ್ತು ಸೋಲನ್ನು ಅನುಭವಿಸಿಲ್ಲ ಎಂದು. ಆತ ಕೇಳಿದ ತಕ್ಷಣ ಆತನಿಗೆ ಸಾಲ ಮತ್ತು ಸಹಾಯ ಸಿಗುತ್ತಿತ್ತು ಮತ್ಯಾರಿಗು ಒಂದು ಪೈಸೆ ಕೈಯೆತ್ತಿ ಕೊಟ್ಟವರಲ್ಲ.  ಕೊರಗ ಸಮುದಾಯದವರು ಬೈದ್ಯರು, ಬಾಣೆರ್, ದೆಕ್ಕುಲು, ಎಟ್ಟಿಯಲೆರ್ ಈ ರೀತಿ ಬೇರೆ ಬೇರೆ ಸಮುದಾಯದವರನ್ನು ಕರೆಯುವುದು ವಾಡಿಕೆ. ಯಾವುದೋ ಒಂದು ಜನಾಂಗದವರ ಮುಖ ಬೆಳಿಗ್ಗೆ ಎದ್ದು  ನೋಡಿದರೆ ಅಪಶಕುನ ಎಂದು ಭಾವಿಸುವ ನಾವು ಇವರನ್ನು ಅದೃಷ್ಟವಂತರು ಎಂದು ಭಾವಿಸಿದರು ಕೂಡ ಇವರು ನಮ್ಮವರು ಎನ್ನುವ ಭಾವನೆ ಬೆಳೆಯಲೇ ಇಲ್ಲ. ನನ್ನ ಅತ್ತೆಯವರು ಪಂಚಾಯತ್ ಅಧ್ಯಕ್ಷರಾದ ಸಮಯದಲ್ಲಿ ಈ ಕೊರಗ ಸಮುದಾಯದ ಮನೆಗಳಿಗೆ ಭೇಟಿ ನೀಡಿದಾಗ ಅವರು ಇವರಲ್ಲಿ ಕೇಳುತ್ತಿದ್ದರಂತೆ ನಾವು ಫೋಟೋಗೆ ಯಾವ ರೀತಿಯ ಭಂಗಿ ನೀಡಬೇಕು ಮರದಲ್ಲಿ ಹತ್ತಿ ಕೂರಬೇಕ ಎಂದು ಕೇಳ್ತಾ ಇದ್ರಂತೆ ಯಾಕೆ ಈ ರೀತಿ ಹೇಳ್ತಾ ಇದ್ದೀರ ಎಂದು ಕೇಳಿದಾಗ ಬಂದವರೆಲ್ಲ ನಮಗೆ ಹಣ ಕೊಟ್ಟು ಈ ರೀತಿಯಾಗಿ ಫೋಟೋ ತೆಗೆಸ್ತಾ ಇದ್ರಂತೆ. ಯಾರಿಗೋ ಬೇಕಾಗಿರುವ ಲೇಖನಕ್ಕೆ ಮತ್ತು ಸಂಶೋಧನೆಗೆ ಈ ರೀತಿಯಾಗಿ ಮಗ್ದ ಜನರನ್ನು ಬಳಸಿಕೊಳ್ಳುವುದು ಎಷ್ಟು ಸರಿ.   
ಸರ್ಕಾರಗಳು ಈ ಕೊರಗ ಸಮುದಾಯದವರಿಗೆ ಕೊಡಮಾಡುತ್ತಿರುವ ಮೊಟ್ಟೆ, ಹಾಲು, ಬೇಳೆ ಕಾಳುಗಳು ಸದ್ದಿಲ್ಲದೆ ಉಳ್ಳವರ ಕೈ ಸೇರುತ್ತಿದೆ, ನಿಜ ಹೇಳಬೇಕಾದರೆ ಅಂತಹ ಯೋಜನೆಗಳು ಇದೆ ಎನ್ನುವುದೇ ಈ ಮಗ್ದರಿಗೆ ಗೊತ್ತಿಲ್ಲ. ಗೊತ್ತಿದ್ದರು ಕೂಡ ಚಟಕ್ಕೆ ದಾಸರಾಗಿ ಸಿಕ್ಕಿದನ್ನು ಅಂಗಡಿಗೆ ಕೊಟ್ಟು ಅಮಲಿನ ಬದುಕಿಗೆ ಹೆಜ್ಜೆ ಇಡುತ್ತಾರೆ. ಹೀಗೆ ಒಂದು ಕೊರಗ ಸಮುದಾಯದ ಮಹಿಳೆ ಅಮಲಿನ ದಾಸಲಾಗಿ ಪದೇ ಪದೇ ಗರ್ಭ ಪಾತವಾಗುತ್ತಿತ್ತು ಇದನ್ನು ತಿಳಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು ಆಕೆಗೆ ದಿವಸ ತುಂಬುವವರೆಗೆ ನೋಡಿಕೊಂಡು ಸೀಮಂತ ಮಾಡಿ ಹೆರಿಗೆ ಮಾಡಿಸಿದ್ದು ಇದೆ. ಅಂದರೆ ಇಲ್ಲಿ ಅವರಿಗೆ ತಿಳಿ ಹೇಳುವವರು ಇಲ್ಲ ಆರೈಕೆ ಮಾಡುವವರು ಇಲ್ಲ ಕೆಲವೊಮ್ಮೆ ನಮ್ಮಲ್ಲಿ ಕೊಡೋಕೆ ಕೈಯಲ್ಲಿ ಹಣ ಇಲ್ಲದಿದ್ದರು ಪರವಾಗಿಲ್ಲ ಪ್ರೀತಿ ತೋರಿಸಿದರೆ ಸಾಕು. ಕೊರಗ ಸಮುದಾಯದವರು ಯಾವತ್ತು ಕೂಡ ತಮ್ಮ ಹಕ್ಕಿಗಾಗಿ ಒತ್ತಾಯ ಮಾಡಿದ ಒಂದೇ ಒಂದು ಪ್ರಸಂಗಗಳಿಲ್ಲ, ಅದೇ ರೀತಿಯಲ್ಲಿ ಇವರನ್ನು ವಿದ್ಯೆಗಾಗಿ  ಪ್ರೋತ್ಸಾಹಿಸಿದವರು ಯಾರಿಲ್ಲ. ದೈವಾರಾಧನೆಗೆ ಅವರು ತಯಾರಿಸುವ ಬುಟ್ಟಿಗಳು ಅನ್ನ ಬಸಿಯುವ ಬಸಿಗೆಗಳು ಎಲ್ಲವು ಅಗತ್ಯ ಆದರೆ ಕಡೆಗೆ ದೈವದ ಕೊಡಿಯಡಿಗೆ ಅವರನ್ನು ಬಿಟ್ಟು ಎಲ್ಲರಿಗೂ ಅವಕಾಶ. ನಮ್ಮ‌ ಮನಸ್ಸುಗಳು ಬದಲಾಗಬೇಕು ಅವರು ನಮ್ಮವರೆಂದು ಗುರುತಿಸುವ ಕಾಲ ಬರಬೇಕು. ಸರಕಾರವೇನೋ ಸ್ವಚ್ಚಂದವಾಗಿ ಹಾರಿ ಕೊಂಡಿದ್ದ ಕಾಡ ಹಕ್ಕಿಗಳನ್ನು ನಾಡೆಂಬ ಪಂಜರದಲ್ಲಿ ಬಂದಿಸಿಟ್ಟಿದೆ ಅವರಿಗೆ ಬೇಕಾಗಿರುವ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಮಾಡಿಕೊಟ್ಟಿಲ್ಲ ಬಿಡುಗಡೆ ಮಾಡುವ ಅಂಕಿ ಅಂಶಗಳಲ್ಲಿ ಎಲ್ಲವು ಇದೆ. ಆದರೆ ಕೈಗೆ ಸಿಕ್ಕಿದ್ದು ಮಾತ್ರ ಅರ್ಧ ಚಂದ್ರ. ತುಳುನಾಡ ಮೂಲ ಜನಾಂಗವಾದ ಕೊರಗರು ಮಾತನಾಡುತ್ತಿದ್ದ ಬಾಷೆಯು ಅದ್ಯಾವತ್ತೋ ಕಾಲ ಗರ್ಭದಲ್ಲಿ ಸೇರಿಯಾಗಿದೆ ಇನ್ನು ಜನಸಂಖ್ಯೆಯು ಅಷ್ಟಕಷ್ಟೆ ಆರಕ್ಕೆ ಏರಿಲ್ಲ ಮೂರಕ್ಕೆ ಇಳಿದಿಲ್ಲ. ತುಳುನಾಡ ಅನನ್ಯವಾದ ಕೊಂಡಿಯೊಂದು ಕಳಚಿ ಬೀಳುತ್ತಿದೆಯೇನೋ ಎನ್ನುವ ನೋವು. ಸಮಾಜ ಅಂದ ಮೇಲೆ ಪ್ರತಿಯೊಂದು ಜನಾಂಗವು ಮುಖ್ಯವೆ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಅದರದೇ ಆದ ಸಂಸ್ಕ್ರತಿ ಆಚರಣೆ ಹೊಂದಿರುತ್ತವೆ. ಒಂದು ಕೊಂಡಿ ಕಳಚಿದಲ್ಲಿ ಅದರೊಂದಿಗಿರುವ ಸಂಸ್ಕ್ರತಿಯೆ ಕಣ್ಮರೆಯಾಗುತ್ತದೆ. ತುಳುನಾಡಿನ ಕಾರಣೀಕ ಸತ್ಯ, ಅಜ್ಜನೆಂದೆ ಕರೆಯಲ್ಪಡುವ ಕೊರಗ ತನಿಯರನ್ನು ಕೊಟ್ಟ ಸಮುದಾಯ ಅದು. ಒಂದು ಜಾತಿಯನ್ನು ಬಿಟ್ಟು ಇನ್ನೊಂದು ಜಾತಿಯಿಲ್ಲ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಾ ಸಾಗೋಣ. ಕೊರಗ ಸಮುದಾಯದ ಅಭ್ಯುದಯಕ್ಕಾಗಿ ಆಳುವ ದೊರೆಗಳು ಶ್ರಮ ಪಡಲಿ ಎಂದು ಈ ಲೇಖನದ ಮೂಲಕ ವಿನಂತಿ ಮಾಡುತ್ತಿದ್ದೇನೆ.

ಪೋಟೋ ಕೃಪೆ:- ಅಂತರ್ಜಾಲ
Share on :

SUDDI

 

Copyright © 2011 Tuluworld - All Rights Reserved